ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನ ಕೋಪವು ಶಾಂತವಾಗಿ ಅವನು ವಷ್ಟಿಯನ್ನೂ ಅವಳನ್ನೂ, ಅವಳ ವರ್ತನೆಯನ್ನೂ, ಅವಳಿಗೆ ವಿರೋಧವಾಗಿ ತಾನು ನೀಡಿದ ತೀರ್ಪನ್ನೂ ಜ್ಞಾಪಿಸಿಕೊಂಡನು.
KO
Copywork
Kannada OKCV 에스더 2장
성경필사는 빠르게 끝내는 입력 훈련이 아니라, 한 절씩 말씀의 문장과 흐름을 다시 붙드는 시간입니다. 입력 내용은 이 브라우저에 임시 저장되며, 로그인하면 계정에도 저장됩니다.
소제목 단위로 진행 · 에스더
ಆಗ ಅರಸನ ಸೇವೆ ಮಾಡುವ ದಾಸರು ಅವನಿಗೆ, “ಅರಸನಿಗೋಸ್ಕರ ರೂಪವತಿಯಾದ ಕನ್ಯೆಯರನ್ನು ಹುಡುಕಲಿ.
ರೂಪವತಿಯಾರಾದ ಸಮಸ್ತ ಕನ್ಯೆಯರು ರಾಜಧಾನಿಯಾದ ಶೂಷನಿಗೆ ಸ್ತ್ರೀಯರು ಇರುವ ಅರಮನೆಗೆ, ಸ್ತ್ರೀಯರ ಮೇಲೆ ಕಾವಲಾಗಿ ಇರುವ ಅರಸನ ಅಧಿಕಾರಿಗಳಾದ ಹೇಗೈ ಎಂಬವನ ವಶಕ್ಕೆ ಒಪ್ಪಿಸಲಿ. ಅರಸನು ತನ್ನ ರಾಜ್ಯದ ಸಮಸ್ತ ಪ್ರಾಂತಗಳಲ್ಲಿ ಅಧಿಕಾರಿಗಳನ್ನು ನೇಮಿಸಲಿ. ಹೇಗೈ ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು ಕೊಡಲಿ.
ಅರಸನ ದೃಷ್ಟಿಗೆ ಮೆಚ್ಚಿಗೆಯಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ,” ಎಂದನು. ಆ ಮಾತು ಅರಸನಿಗೆ ಸರಿಕಂಡುಬಂದದ್ದರಿಂದ ಅದೇ ಪ್ರಕಾರ ಮಾಡಿದನು.
ಶೂಷನಿನ ಅರಮನೆಯಲ್ಲಿ ಬೆನ್ಯಾಮೀನ್ ಕುಲದ ಕೀಷನ ಮರಿಮಗನೂ, ಶಿಮ್ಮೀಯ ಮೊಮ್ಮಗನೂ, ಯಾಯೀರನ ಮಗನೂ ಆದ ಮೊರ್ದೆಕೈ ಎಂಬ ಹೆಸರುಳ್ಳ ಒಬ್ಬ ಯೆಹೂದ್ಯನಿದ್ದನು.
ಅವನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಸೆರೆಯಾಗಿ ತಂದ ಯೆಹೂದದ ಅರಸನಾಗಿರುವ ಯೆಹೋಯಾಕೀನನ ಸಂಗಡ ಯೆರೂಸಲೇಮಿನಿಂದ ಸೆರೆಹಿಡಿಯಲಾದವರಲ್ಲಿ ಒಬ್ಬನಾಗಿದ್ದನು.
ಇವನು ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರ್ ಎಂಬ ಹೆಸರನ್ನು ಪಡೆದ ಹದೆಸ್ಸಳನ್ನು ಸಾಕುತ್ತಿದ್ದನು. ಏಕೆಂದರೆ ಅವಳಿಗೆ ತಂದೆತಾಯಿಗಳು ಇರಲಿಲ್ಲ. ಈಕೆಯು ರೂಪವತಿಯಾಗಿಯೂ ಸೌಂದರ್ಯವಂತಳಾಗಿಯೂ ಇದ್ದಳು. ಅವಳ ತಂದೆತಾಯಿಗಳು ಸತ್ತು ಹೋದ ತರುವಾಯ ಮೊರ್ದೆಕೈ ಅವಳನ್ನು ತನ್ನ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದನು.
ಅರಸನ ಮಾತನ್ನು ಮತ್ತು ಅವನ ಕಟ್ಟಳೆಯನ್ನು ಕೇಳಿದ ತರುವಾಯ ಶೂಷನಿನ ಅರಮನೆಯಲ್ಲಿ ಹೇಗೈಯನ ವಶಕ್ಕೆ ಅನೇಕ ಕನ್ಯೆಯರನ್ನು ಒಪ್ಪಿಸಲಾಯಿತು. ಎಸ್ತೇರಳು ಸಹ ಅರಸನ ಅರಮನೆಯಲ್ಲಿ ಸ್ತ್ರೀಯರ ಕಾವಲಿನವನಾದ ಹೇಗೈಯ ಜವಾಬ್ದಾರಿಕೆಯ ಕೋಣೆಯಲ್ಲಿ ಇದ್ದಳು.
ಎಸ್ತೇರಳು ಹೇಗೈಯ ಮೆಚ್ಚುಗೆಯನ್ನು ಗಳಿಸಿದ್ದರಿಂದ ಅವನ ಸಮ್ಮುಖದಲ್ಲಿ ಅವಳಿಗೆ ದಯೆ ದೊರಕಿತು. ಆದಕಾರಣ ಅವನು ತ್ವರೆಯಾಗಿ ಸೌಂದರ್ಯವರ್ಧಕ ಸಾಧನಗಳನ್ನೂ ಅರಸನ ಅರಮನೆಯಿಂದ ಏಳುಮಂದಿ ದಾಸಿಯರನ್ನೂ ಅವಳಿಗೆ ಕೊಟ್ಟನು. ಇದಲ್ಲದೆ ಸ್ತ್ರೀಯರಿದ್ದ ಕೋಣೆಯಲ್ಲಿ ಉತ್ತಮವಾದ ಭೋಜನಾಂಶಗಳನ್ನು ಅವಳಿಗೂ ಅವಳ ದಾಸಿಯರಿಗೂ ಕೊಟ್ಟನು. ಆಕೆಯನ್ನೂ ಮತ್ತು ಆಕೆಯ ಸೇವಕಿಯರನ್ನೂ ಅಂತಃಪುರದ ಉತ್ತಮ ಭಾಗದಲ್ಲಿರಿಸಿದನು.
ಆದರೆ ಎಸ್ತೇರಳು ತಾನು ಇಂಥ ದೇಶದವಳು ಮತ್ತು ಇಂಥ ಕುಟುಂಬದ ಹಿನ್ನೆಲೆಯವಳು ಎಂಬುದನ್ನು ತಿಳಿಸಲಿಲ್ಲ. ಏಕೆಂದರೆ ತಿಳಿಸಬಾರದೆಂದು ಮೊರ್ದೆಕೈ ಅವಳಿಗೆ ಆಜ್ಞಾಪಿಸಿದ್ದನು.
ಆದರೆ ಎಸ್ತೇರಳ ಕ್ಷೇಮವನ್ನೂ, ಅವಳಿಗೆ ಆಗುವಂಥಾದ್ದನ್ನೂ ತಿಳಿದುಕೊಳ್ಳುವುದಕ್ಕೆ ಮೊರ್ದೆಕೈ ಪ್ರತಿದಿನವೂ ಸ್ತ್ರೀಯರಿದ್ದ ಮನೆಯ ಅಂಗಳದ ಮುಂದೆ ತಿರುಗಾಡುತ್ತಿದ್ದನು.
ಒಬ್ಬೊಬ್ಬ ಕನ್ನಿಕೆಯು ಆರು ತಿಂಗಳು ಸುಗಂಧ ತೈಲದಿಂದಲೂ ಆರು ತಿಂಗಳು ಸೌಂದರ್ಯವರ್ಧಕ ಸಾಧನಗಳಿಂದಲೂ ಕನ್ಯೆಯರ ಲೇಪನಕಾಲದ ಪ್ರಕಾರ ಹನ್ನೆರಡು ತಿಂಗಳಾದ ತರುವಾಯ ಅರಸನಾದ ಅಹಷ್ವೇರೋಷನ ಬಳಿಗೆ ಪ್ರತಿಯೊಬ್ಬ ಕನ್ಯೆಯು ಹೋಗಲು ಅವರವರ ಸರದಿ ಬರುತ್ತಿತ್ತು.
ಈ ಪ್ರಕಾರ ಕನ್ಯೆಯು ಅರಸನ ಬಳಿಗೆ ಪ್ರವೇಶಿಸುವಾಗ ಸ್ತ್ರೀಯರ ಮನೆಯೊಳಗಿಂದ ತನ್ನ ಸಂಗಡ ಅರಸನ ಅರಮನೆಗೆ ಹೋಗಲು ಅವಳು ಏನು ಬೇಡುವಳೋ ಅದು ಅವಳಿಗೆ ಒದಗಿಸಲಾಗುತ್ತಿತ್ತು.
ಆಗ ಅವಳು ಸಾಯಂಕಾಲದಲ್ಲಿ ರಾಜನಿವಾಸಕ್ಕೆ ಪ್ರವೇಶಿಸಿ ಮಾರನೆಯ ದಿವಸದಲ್ಲಿ ಉಪಪತ್ನಿಗಳ ಪಾಲಕನಾದ ಶವಷ್ಗಜ ಎಂಬ ರಾಜಕಂಚುಕಿಯ ವಶದಲ್ಲಿದ್ದ ಸ್ತ್ರೀಯರ ಎರಡನೆಯ ಮನೆಗೆ ಬರಬೇಕಾಗಿತ್ತು. ಅರಸನು ಯಾರಲ್ಲಿ ಸಂತೋಷಪಟ್ಟು ಅವಳನ್ನು ಹೆಸರಿನಿಂದ ಕರೆದ ಹೊರತು ಅವಳು ಪುನಃ ಅರಸನ ಬಳಿಗೆ ಹೋಗಬಾರದು.
ಮೊರ್ದೆಕೈಯ ದತ್ತುಮಗಳೂ, ಅವನ ಚಿಕ್ಕಪ್ಪನಾದ ಅಬೀಹೈಲನ ಮಗಳೂ ಆದ ಎಸ್ತೇರಳು ಅರಸನ ಬಳಿಗೆ ಹೋಗಲು ಸರದಿ ಬಂದಾಗ, ಸ್ತ್ರೀಯರ ಪಾಲಕನೂ ರಾಜಕಂಚುಕಿಯೂ ಆದ ಹೇಗೈ ನೇಮಿಸಿದ್ದನ್ನೇ ಹೊರತು ಬೇರಾವುದನ್ನೂ ಆಕೆ ಕೇಳಲಿಲ್ಲ. ಇದಲ್ಲದೆ ಎಸ್ತೇರಳು ತನ್ನನ್ನು ನೋಡುವ ಎಲ್ಲರಿಂದಲೂ ದಯೆಹೊಂದಿದ್ದಳು.
ಎಸ್ತೇರಳು ಅರಸನಾದ ಅಹಷ್ವೇರೋಷನ ಆಳಿಕೆಯ ಏಳನೆಯ ವರ್ಷದ ಹತ್ತನೆಯ ತಿಂಗಳಾದ ತೇಬೆತ್ ಎಂಬ ಪುಷ್ಯ ಮಾಸದಲ್ಲಿ ಅರಸನ ಬಳಿಗೆ ಕರೆತರಲಾಯಿತು.
ಅರಸನು ಸಕಲ ಕನ್ಯೆಯರಿಗಿಂತ ಹೆಚ್ಚಾಗಿ ಎಸ್ತೇರಳನ್ನು ಮೆಚ್ಚಿಕೊಂಡನು. ಅವಳಿಗೆ ಅವನ ಸಮ್ಮುಖದಲ್ಲಿ ಸಮಸ್ತ ಕನ್ಯೆಯರಿಗಿಂತ ಹೆಚ್ಚು ದಯೆಯೂ ಮೆಚ್ಚುಗೆಯೂ ದೊರಕಿತು. ಆದ್ದರಿಂದ ಅವನು ರಾಜಕಿರೀಟವನ್ನು ಅವಳ ತಲೆಯ ಮೇಲೆ ಇರಿಸಿ ಎಸ್ತೇರಳನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಆರಿಸಿಕೊಂಡನು.
ಆಗ ಅರಸನು ತನ್ನ ಸಮಸ್ತ ಪ್ರಧಾನರಿಗೂ ಸೇವಕರಿಗೂ ಎಸ್ತೇರಳ ಗೌರವಾರ್ಥವಾಗಿ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಎಲ್ಲಾ ಪ್ರಾಂತಗಳಿಗೂ ರಜೆಯನ್ನು ಕೊಟ್ಟು ಅರಸನ ಸ್ಥಿತಿಗೆ ತಕ್ಕಂಥ ಬಹುಮಾನಗಳನ್ನು ಕೊಟ್ಟನು.
ಕನ್ಯೆಯರನ್ನು ಎರಡನೆಯ ಸಾರಿ ಕೂಡಿಸುವಾಗ, ಮೊರ್ದೆಕೈಯು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತುಕೊಂಡಿದ್ದನು.
ಎಸ್ತೇರಳು ಮೊರ್ದೆಕೈಯು ತನಗೆ ಆಜ್ಞಾಪಿಸಿದ ಹಾಗೆ ತಾನು ಇಂಥ ದೇಶದವಳು ಮತ್ತು ಇಂಥ ಕುಟುಂಬದ ಹಿನ್ನೆಲೆಯವಳು ಎಂಬುದನ್ನು ಯಾರಿಗೂ ತಿಳಿಸಿರಲಿಲ್ಲ. ಏಕೆಂದರೆ ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಆಕೆ ಅವನ ಆಜ್ಞೆಯನ್ನು ಕೈಕೊಂಡು ನಡೆದಂತೆಯೇ ಈಗಲೂ ಅವನ ಆಜ್ಞೆಯನ್ನು ಪಾಲಿಸುತ್ತಿದ್ದಳು.
ಆ ದಿವಸಗಳಲ್ಲಿ ಮೊರ್ದೆಕೈಯು ಅರಮನೆಯ ಬಾಗಿಲಲ್ಲಿ ಕುಳಿತಿರುವಾಗ, ದ್ವಾರಪಾಲಕರಾದಂಥ ಅರಸನ ರಾಜಕಂಚುಕಿಗಳಾದ ಬಿಗೆತಾನ್ ಮತ್ತು ತೆರೆಷ್ ಎಂಬಿಬ್ಬರು ಅರಸನಾದ ಅಹಷ್ವೇರೋಷನ ಮೇಲೆ ಕೋಪಗೊಂಡು ಅವನನ್ನು ಕೊಲ್ಲಬೇಕೆಂದು ಒಳಸಂಚು ಮಾಡಿದರು.
ಈ ಕಾರ್ಯವು ಮೊರ್ದೆಕೈಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು. ಎಸ್ತೇರಳು ಮೊರ್ದೆಕೈಯ ಹೆಸರನ್ನು ಅರಸನಿಗೆ ಹೇಳಿ ಆ ಒಳಸಂಚಿನ ಬಗ್ಗೆ ತಿಳಿಸಿದಳು.
ಈ ವಿಷಯ ವಿಚಾರಣೆಗೆ ಬಂದಾಗ ನಿಜವೆಂದು ಗೊತ್ತಾಯಿತು. ಆಗ ಆ ಇಬ್ಬರು ಅಧಿಕಾರಿಗಳನ್ನೂ ಗಲ್ಲಿಗೇರಿಸಲಾಯಿತು. ಇವೆಲ್ಲವನ್ನೂ ಅರಸನ ಮುಂದೆ ಇರುವ ರಾಜನ ಇತಿಹಾಸಗಳ ಪುಸ್ತಕದಲ್ಲಿ ಬರೆದಿಡಲಾಯಿತು.