ಯೇಸು ಒಂದು ಸಬ್ಬತ್ ದಿನ ಪೈರಿನ ಹೊಲವನ್ನು ಹಾದುಹೋಗುತ್ತಿದ್ದಾಗ, ಅವರ ಶಿಷ್ಯರು ಹಸಿದಿದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
EN
Copywork
Kannada OKCV Matthew 12장
Copywork is not a speed-typing drill but time to re-hold the words and flow of Scripture, one verse at a time. Your input is saved temporarily in this browser, and to your account when you are signed in.
Practice by section · Matthew
ಫರಿಸಾಯರು ಅದನ್ನು ಕಂಡು ಯೇಸುವಿಗೆ, “ಇಗೋ, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಯಮಕ್ಕೆ ವಿರುದ್ಧವಾಗಿರುವದನ್ನು ಮಾಡುತ್ತಿದ್ದಾರೆ,” ಎಂದರು.
ಅದಕ್ಕೆ ಯೇಸು ಅವರಿಗೆ, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ?
ಅವನು ದೇವರ ಆಲಯದೊಳಗೆ ಹೋಗಿ, ಯಾಜಕರ ಹೊರತು ತಾನಾಗಲಿ ತನ್ನ ಸಂಗಡಿಗರಾಗಲಿ, ತಿನ್ನುವುದಕ್ಕೆ ಧರ್ಮಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತಿನ್ನಲಿಲ್ಲವೇ?
ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ಉಲ್ಲಂಘಿಸಿದರೂ ನಿರ್ದೋಷಿಗಳಾಗಿದ್ದಾರೆಂದು ನೀವು ನಿಯಮದಲ್ಲಿ ಓದಲಿಲ್ಲವೇ?
ದೇವಾಲಯಕ್ಕಿಂತಲೂ ದೊಡ್ಡವನು ಇಲ್ಲಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ.
ಆದರೆ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ, ನಿರಪರಾಧಿಗಳನ್ನು ಖಂಡಿಸುತ್ತಿರಲಿಲ್ಲ.
ಏಕೆಂದರೆ ಮನುಷ್ಯಪುತ್ರನಾದ ನಾನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದೇನೆ,” ಎಂದು ಹೇಳಿದರು.
ಯೇಸು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದರು.
ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು. ಆಗ ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯಸಮ್ಮತವೋ?” ಎಂದು ಕೇಳಿದರು.
ಅದಕ್ಕೆ ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್ ದಿನದಲ್ಲಿ ಕುಣಿಯೊಳಗೆ ಬಿದ್ದರೆ, ಅವನು ಅದನ್ನು ಮೇಲಕ್ಕೆ ಎತ್ತದೆ ಇರುವನೇ?
ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಮೌಲ್ಯವುಳ್ಳವನಾಗಿದ್ದಾನಲ್ಲವೇ? ಆದ್ದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವುದು ನ್ಯಾಯಸಮ್ಮತವಾಗಿದೆ!” ಎಂದು ಹೇಳಿದರು.
ಆಗ ಯೇಸು ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದರು. ಅವನು ಕೈಚಾಚಿದಾಗ ಅದು ಸಂಪೂರ್ಣ ವಾಸಿಯಾಗಿ ಇನ್ನೊಂದು ಕೈಯಂತೆಯೇ ಆಯಿತು.
ಆದರೆ ಫರಿಸಾಯರು ಹೊರಗೆ ಹೋಗಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಆಲೋಚನೆಮಾಡಿದರು.
ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದರು. ದೊಡ್ಡ ಜನರ ಗುಂಪು ಅವರನ್ನು ಹಿಂಬಾಲಿಸಿತು. ಯೇಸು ಅವರಲ್ಲಿ ಅಸ್ವಸ್ಥರಾದವರನ್ನು ಗುಣಪಡಿಸಿದರು.
ಆದರೆ ಯೇಸು ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವರನ್ನು ಎಚ್ಚರಿಸಿದರು.
ಹೀಗೆ ದೇವರು ಪ್ರವಾದಿಯಾದ ಯೆಶಾಯನ ಮುಖಾಂತರ ಹೇಳಿದ ಮಾತು ನೆರವೇರಿತು. ಅದೇನೆಂದರೆ:
“ಈತನು ನಾನು ಆರಿಸಿಕೊಂಡ ನನ್ನ ದಾಸನು,
ಈತನು ಜಗಳವಾಡುವವನಲ್ಲ, ಕೂಗಾಡುವವನಲ್ಲ;
ಈತನು ನ್ಯಾಯವನ್ನು ಜಯಕ್ಕೆ ನಡೆಸುವವರೆಗೆ,
ಈತನ ಹೆಸರಿನಲ್ಲಿಯೇ ಯೆಹೂದ್ಯರಲ್ಲದವರು ನಿರೀಕ್ಷೆ ಇಡುವರು.”
ಆಗ ಕೆಲವರು ದೆವ್ವಹಿಡಿದ ಕುರುಡನೂ ಮೂಕನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ತಂದರು. ಅವರು ಅವನನ್ನು ಗುಣಪಡಿಸಿದ್ದರಿಂದ, ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ದೃಷ್ಟಿ ಹೊಂದಿದನು.
ಆಗ ಜನರೆಲ್ಲರೂ ವಿಸ್ಮಯಗೊಂಡವರಾಗಿ, “ದಾವೀದನ ಪುತ್ರನು ಈತನೇ ಅಲ್ಲವೇ?” ಎಂದರು.
ಆದರೆ ಫರಿಸಾಯರು ಇದನ್ನು ಕೇಳಿದಾಗ, “ಈತನು ದೆವ್ವಗಳನ್ನು ಓಡಿಸುತ್ತಿರುವುದು ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದಲೇ,” ಎಂದರು.
ಯೇಸು ಅವರ ಆಲೋಚನೆಗಳನ್ನು ತಿಳಿದು ಅವರಿಗೆ, “ತನಗೆ ವಿರೋಧವಾಗಿ ವಿಭಜಿಸಿಕೊಳ್ಳುವ ಪ್ರತಿಯೊಂದು ರಾಜ್ಯವು ನಾಶವಾಗುವುದು ಮತ್ತು ತನಗೆ ವಿರೋಧವಾಗಿ ವಿಭಾಗವಾಗಿರುವ ಪ್ರತಿಯೊಂದು ಪಟ್ಟಣವಾಗಲಿ ಮನೆಯಾಗಲಿ ನಿಲ್ಲುವುದಿಲ್ಲ.
ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಓಡಿಸಿದರೆ, ಅವನು ತನಗೆ ವಿರೋಧವಾಗಿ ವಿಭಾಗವಾಗಿರುವನು. ಹಾಗಾದರೆ ಅವನ ರಾಜ್ಯವು ನಿಲ್ಲುವುದು ಹೇಗೆ?
ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಜನರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು.
ನಾನು ದೇವರ ಆತ್ಮನಿಂದ ದೆವ್ವಗಳನ್ನು ಓಡಿಸುವುದಾದರೆ ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
“ಇದಲ್ಲದೆ, ಯಾವನಾದರೂ ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ, ಅವನ ಮನೆಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸೂರೆ ಮಾಡಲಾದೀತೇ? ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು.
“ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.
ಆದಕಾರಣ ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಕ್ಕೂ ದೂಷಣೆಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮರಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದಕ್ಕೆ ಕ್ಷಮಾಪಣೆಯಿಲ್ಲ.
ಯಾರಾದರೂ ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ, ಈ ಯುಗದಲ್ಲೇ ಆಗಲಿ ಬರುವ ಯುಗದಲ್ಲೇ ಆಗಲಿ ಅದಕ್ಕಾಗಿ ಅವರಿಗೆ ಕ್ಷಮೆ ದೊರಕುವುದಿಲ್ಲ.
“ಮರವು ಒಳ್ಳೆಯದಾಗಿದ್ದರೆ, ಅದರ ಫಲವು ಒಳ್ಳೆಯದಾಗಿರುವುದು; ಮರವು ಕೆಟ್ಟದ್ದಾಗಿದ್ದರೆ, ಅದರ ಫಲವು ಕೆಟ್ಟದ್ದಾಗಿರುವುದು. ಏಕೆಂದರೆ ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು.
ಸರ್ಪಸಂತತಿಯವರೇ, ಕೆಟ್ಟವರಾಗಿರುವ ನೀವು ಒಳ್ಳೆಯದೇನನ್ನಾದರೂ ಮಾತನಾಡುವಿರೋ? ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ.
ಒಳ್ಳೆಯವನು ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.
ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು.
ನೀನು ನಿನ್ನ ಮಾತುಗಳಿಂದಲೇ ನೀತಿವಂತನೆಂದು ನಿರ್ಣಯಿಸಲಾಗುವುದು ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ನಿರ್ಣಯಿಸಲಾಗುವುದು,” ಎಂದು ಹೇಳಿದರು.
ಆಗ ನಿಯಮ ಬೋಧಕರೂ ಫರಿಸಾಯರೂ, “ಬೋಧಕರೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ಕಾಣಬೇಕೆಂದಿದ್ದೇವೆ,” ಎಂದು ಕೇಳಿದರು.
ಯೇಸು ಉತ್ತರವಾಗಿ ಅವರಿಗೆ, “ವ್ಯಭಿಚಾರದ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ. ಪ್ರವಾದಿ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಈ ಸಂತತಿಗೆ ಕೊಡಲಾಗುವುದಿಲ್ಲ.
ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ದೊಡ್ಡ ಮೀನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಪುತ್ರನಾದ ನಾನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭದಲ್ಲಿರುವೆನು.
ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ನಿಂತು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ.
ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ.
“ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ, ಅದು,
‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು, ಆ ಮನೆಯು ಬರಿದಾಗಿಯೂ ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ.
ಆಗ ಅದು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುವವು. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು. ಅದರಂತೆಯೇ ಈ ದುಷ್ಟ ಸಂತತಿಗೂ ಆಗುವುದು,” ಎಂದು ಹೇಳಿದರು.
ಯೇಸು ಇನ್ನೂ ಜನರ ಸಂಗಡ ಮಾತನಾಡುತ್ತಿದ್ದಾಗ, ಅವರ ತಾಯಿ ಮತ್ತು ಸಹೋದರರು ಅವರೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.
ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು.
ಅದಕ್ಕೆ ಯೇಸು ತಮಗೆ ಹೇಳಿದವನಿಗೆ ಉತ್ತರವಾಗಿ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ,
ಶಿಷ್ಯರ ಕಡೆಗೆ ತಮ್ಮ ಕೈಚಾಚಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು.
ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ,” ಎಂದು ಹೇಳಿದರು.