ಯೆಹೋವ ದೇವರು ಸಾರಳಿಗೆ ವಾಗ್ದಾನ ಮಾಡಿದಂತೆ ಆಕೆಗೆ ದಯೆತೋರಿಸಿದರು.
KO
Copywork
Kannada OKCV 창세기 21장
성경필사는 빠르게 끝내는 입력 훈련이 아니라, 한 절씩 말씀의 문장과 흐름을 다시 붙드는 시간입니다. 입력 내용은 이 브라우저에 임시 저장되며, 로그인하면 계정에도 저장됩니다.
소제목 단위로 진행 · 창세기
ದೇವರು ಅಬ್ರಹಾಮನಿಗೆ ಹೇಳಿದ ಸಮಯದಲ್ಲಿ ಅವನು ಮುದುಕನಾಗಿದ್ದಾಗ, ಸಾರಳು ಗರ್ಭಿಣಿಯಾಗಿ ಅವನಿಗೆ ಮಗನನ್ನು ಹೆತ್ತಳು.
ಅಬ್ರಹಾಮನು ತನಗೆ ಸಾರಳಲ್ಲಿ ಹುಟ್ಟಿದ ಮಗನಿಗೆ, ಇಸಾಕ, ಎಂದು ಹೆಸರಿಟ್ಟನು.
ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು.
ಅಬ್ರಹಾಮನ ಮಗ ಇಸಾಕನು ಜನಿಸಿದಾಗ ಅವನು ನೂರು ವರ್ಷದವನಾಗಿದ್ದನು.
ಆಗ ಸಾರಳು, “ದೇವರು ನನ್ನನ್ನು ನಗುವಂತೆ ಮಾಡಿದ್ದಾರೆ. ಹೀಗೆ ಕೇಳುವವರೆಲ್ಲರೂ ನನ್ನೊಂದಿಗೆ ನಗುವರು.
ಸಾರಳು ಮಕ್ಕಳಿಗೆ ಹಾಲು ಕುಡಿಸುವಳೆಂದು ಅಬ್ರಹಾಮನಿಗೆ ಯಾರು ಹೇಳುತ್ತಿದ್ದರು? ನಾನು ಅವನಿಗೆ ಮುದಿಪ್ರಾಯದಲ್ಲಿ ಮಗನನ್ನು ಹೆತ್ತೆನು,” ಎಂದಳು.
ಇಸಾಕನು ಬೆಳೆದು ಬಾಲಕನಾಗಿ ತಾಯಿಯ ಹಾಲು ಕುಡಿಯುವುದನ್ನು ಬಿಟ್ಟನು. ಆ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣ ಮಾಡಿಸಿದನು.
ಈಜಿಪ್ಟಿನವಳಾದ ಹಾಗರಳಿಗೆ ಅಬ್ರಹಾಮನಿಂದ ಜನಿಸಿದ ಮಗನು ಹಾಸ್ಯ ಮಾಡುವುದನ್ನು ಸಾರಳು ನೋಡಿ,
ಅಬ್ರಹಾಮನಿಗೆ, “ಈ ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಈ ದಾಸಿಯ ಮಗನು ನನ್ನ ಮಗ ಇಸಾಕನ ಸಂಗಡ ಬಾಧ್ಯನಾಗಬಾರದು,” ಎಂದಳು.
ಅಬ್ರಹಾಮನಿಗೆ ತನ್ನ ಮಗನ ದೆಸೆಯಿಂದ ಬಹು ದುಃಖವಾಯಿತು.
ಆಗ ದೇವರು ಅಬ್ರಹಾಮನಿಗೆ, “ಹುಡುಗನಿಗಾಗಿಯೂ, ನಿನ್ನ ದಾಸಿಗಾಗಿಯೂ ನೀನು ಚಿಂತಿಸಬೇಡ. ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು. ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು.
ದಾಸಿಯ ಮಗನೂ ನಿನ್ನ ಸಂತಾನವಾಗಿರುವುದರಿಂದ, ಅವನನ್ನೂ ನಾನು ಜನಾಂಗವಾಗಿ ಮಾಡುವೆನು,” ಎಂದರು.
ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ, ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು, ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ, ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಮರುಭೂಮಿಯಲ್ಲಿ ಅಲೆದಾಡುತ್ತಿದ್ದಳು.
ತಿತ್ತಿಯೊಳಗಿನ ನೀರು ಮುಗಿದಾಗ, ಆಕೆ ಮಗುವನ್ನು ಒಂದು ಮರದ ಕೆಳಗೆ ಮಲಗಿಸಿ,
ಬಾಣವನ್ನೆಸೆಯುವಷ್ಟು ದೂರಹೋಗಿ ಕುಳಿತುಕೊಂಡು, “ಮಗುವಿನ ಸಾವನ್ನು ನಾನು ನೋಡಲಾರೆನು,” ಎಂದು ಹೇಳಿ ಸ್ವರವೆತ್ತಿ ಅತ್ತಳು.
ದೇವರು ಆ ಹುಡುಗನ ಅಳುವ ಸ್ವರವನ್ನು ಕೇಳಿದರು. ಆಗ ದೇವದೂತನು ಆಕಾಶದೊಳಗಿಂದ ಹಾಗರಳನ್ನು ಕರೆದು, ಆಕೆಗೆ, “ಹಾಗರಳೇ, ವ್ಯಥೆಪಡುವುದೇಕೆ? ಅಂಜಬೇಡ ದೇವರು ಹುಡುಗನ ಸ್ವರವನ್ನು ಕೇಳಿದ್ದಾರೆ.
ಎದ್ದು ಹುಡುಗನನ್ನು ಎತ್ತಿಕೊಂಡು ನಿನ್ನ ಕೈಯಲ್ಲಿ ತೆಗೆದುಕೋ. ನಾನು ಅವನನ್ನು ದೊಡ್ಡ ಜನಾಂಗದವನನ್ನಾಗಿ ಮಾಡುವೆನು,” ಎಂದನು.
ದೇವರು ಆಕೆಯ ಕಣ್ಣುಗಳನ್ನು ತೆರೆಯಲು, ಆಕೆಯು ನೀರಿನ ಬಾವಿಯನ್ನು ನೋಡಿದಳು. ಅಲ್ಲಿಗೆ ಹೋಗಿ ತಿತ್ತಿಯಲ್ಲಿ ನೀರನ್ನು ತುಂಬಿಸಿ, ಹುಡುಗನಿಗೆ ಕುಡಿಯಲು ಕೊಟ್ಟಳು.
ದೇವರು ಆ ಹುಡುಗನ ಸಂಗಡ ಇದ್ದರು. ಹುಡುಗನು ಬೆಳೆದು ಮರುಭೂಮಿಯಲ್ಲಿ ವಾಸಮಾಡಿ ಬಿಲ್ಲುಗಾರನಾದನು.
ಇಷ್ಮಾಯೇಲನು ಪಾರಾನಿನ ಮರುಭೂಮಿಯಲ್ಲಿ ವಾಸಮಾಡುತ್ತಿದ್ದಾಗ, ಅವನ ತಾಯಿಯು ಅವನಿಗೋಸ್ಕರ ಈಜಿಪ್ಟ್ ದೇಶದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು.
ಆ ಕಾಲದಲ್ಲಿ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮನಿಗೆ, “ನೀನು ಮಾಡುವ ಎಲ್ಲಾ ಕೆಲಸಕಾರ್ಯಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾರೆ.
ಆದ್ದರಿಂದ ನೀನು ನನಗೂ, ನನ್ನ ಮಗನಿಗೂ, ನನ್ನ ಮೊಮ್ಮಗನಿಗೂ ವಂಚನೆ ಮಾಡುವುದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣಮಾಡು. ನಾನು ನಿನಗೆ ಒಳ್ಳೆಯದನ್ನೇ ಮಾಡಿದ ಪ್ರಕಾರ, ನೀನು ನನಗೂ, ನೀನು ವಾಸಮಾಡುತ್ತಿರುವ ಈ ದೇಶಕ್ಕೂ ಒಳ್ಳೆಯದನ್ನೇ ಮಾಡಬೇಕು,” ಎಂದನು.
ಅದಕ್ಕೆ ಅಬ್ರಹಾಮನು, “ನಾನು ಹಾಗೆಯೇ ಪ್ರಮಾಣ ಮಾಡುತ್ತೇನೆ,” ಎಂದನು.
ಅಬೀಮೆಲೆಕನ ಸೇವಕರು ಬಲಾತ್ಕಾರದಿಂದ ತೆಗೆದುಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಿದನು.
ಅದಕ್ಕೆ ಅಬೀಮೆಲೆಕನು, “ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆ. ನೀನೂ ನನಗೆ ತಿಳಿಸಲಿಲ್ಲ. ನಾನು ಇಂದಿನವರೆಗೂ ಅದನ್ನು ಕೇಳಲೂ ಇಲ್ಲ,” ಎಂದನು.
ಆಗ ಅಬ್ರಹಾಮನು ಕುರಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು. ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.
ಅಬ್ರಹಾಮನು ಹಿಂಡಿನಿಂದ ಏಳು ಹೆಣ್ಣು ಕುರಿಮರಿಗಳನ್ನು ಬೇರೆ ಮಾಡಿ ನಿಲ್ಲಿಸಿದನು.
ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಆ ಏಳು ಹೆಣ್ಣು ಕುರಿಮರಿಗಳನ್ನು ಬೇರೆಯಾಗಿ ನಿಲ್ಲಿಸಿದ ಅರ್ಥ ಏನು?” ಎಂದನು.
ಅದಕ್ಕೆ ಅಬ್ರಹಾಮನು, “ನಾನೇ ಆ ಬಾವಿಯನ್ನು ಅಗೆದಿದ್ದೇನೆಂಬುದಕ್ಕೆ ಸಾಕ್ಷಿಯಾಗಿ ಆ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು,” ಎಂದನು.
ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣ ಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಅಬ್ರಹಾಮನು ಹೆಸರಿಟ್ಟನು.
ಹೀಗೆ ಅವರು ಬೇರ್ಷೆಬದಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂದಿರುಗಿದರು.
ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲ ವೃಕ್ಷವನ್ನು ನೆಟ್ಟು, ಅಲ್ಲಿ ನಿತ್ಯ ದೇವರಾಗಿರುವ ಯೆಹೋವ ದೇವರ ಹೆಸರನ್ನು ಹೇಳಿ ಆರಾಧಿಸಿದನು.
ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹುಕಾಲ ತಂಗಿದ್ದನು.