ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ,
JA
Copywork
Kannada OKCV Matthew 14장
写経は速く終える入力練習ではなく、一節ずつみ言葉の文と流れを改めて受け止める時間です。入力内容はこのブラウザに一時保存され、ログインするとアカウントにも保存されます。
小見出し単位で進める · Matthew
ತನ್ನ ಸೇವಕರಿಗೆ, “ಈತನು ಸ್ನಾನಿಕನಾದ ಯೋಹಾನನೇ. ಈಗ ಇವನು ಸತ್ತವರೊಳಗಿಂದ ಎದ್ದಿದ್ದಾನೆ! ಆದ್ದರಿಂದಲೇ ಈತನಲ್ಲಿ ಅದ್ಭುತಕಾರ್ಯಗಳನ್ನು ನಡೆಸುವ ಶಕ್ತಿಗಳಿವೆ,” ಎಂದು ಹೇಳಿದನು.
ಹೆರೋದನು ತನ್ನ ಸಹೋದರ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿ, ಯೋಹಾನನನ್ನು ಹಿಡಿಸಿ, ಕಟ್ಟಿ ಸೆರೆಯಲ್ಲಿ ಹಾಕಿಸಿದ್ದನು.
ಏಕೆಂದರೆ ಯೋಹಾನನು, “ನೀನು ಅವಳನ್ನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಅವನಿಗೆ ಹೇಳಿದ್ದನು.
ಹೆರೋದನು ಯೋಹಾನನನ್ನು ಕೊಲ್ಲಬೇಕೆಂದಿದ್ದರೂ ಜನಸಮೂಹಕ್ಕೆ ಭಯಪಟ್ಟನು. ಅವರು ಯೋಹಾನನನ್ನು ಪ್ರವಾದಿಯೆಂದು ಎಣಿಸಿದ್ದರು.
ಆದರೆ ಹೆರೋದನ ಹುಟ್ಟಿದ ದಿನವನ್ನು ಆಚರಿಸುವಾಗ, ಹೆರೋದ್ಯಳ ಮಗಳು ಅವರ ಮುಂದೆ ನರ್ತನ ಮಾಡಿ ಹೆರೋದನನ್ನು ಬಹಳ ಮೆಚ್ಚಿಸಿದಳು.
ಆದ್ದರಿಂದ ಅವಳು ಏನು ಕೇಳಿಕೊಂಡರೂ ಅವಳಿಗೆ ಕೊಡುವೆನೆಂದು ಅರಸನು ಆಣೆಯಿಟ್ಟು ಪ್ರಮಾಣ ಮಾಡಿದನು.
ಅವಳು ತನ್ನ ತಾಯಿಯ ಸಲಹೆ ಪಡೆದು, “ಸ್ನಾನಿಕನಾದ ಯೋಹಾನನ ತಲೆಯನ್ನು ಇಲ್ಲಿಯೇ ಒಂದು ತಟ್ಟೆಯಲ್ಲಿ ನನಗೆ ತರಿಸಿಕೊಡು,” ಎಂದು ಹೇಳಿದಳು.
ಆಗ ಅರಸನು ದುಃಖಪಟ್ಟರೂ ತನ್ನ ಪ್ರಮಾಣದ ನಿಮಿತ್ತವಾಗಿ ಮತ್ತು ಭೋಜನಕ್ಕೆ ಬಂದ ಅತಿಥಿಗಳ ನಿಮಿತ್ತವಾಗಿ ಅದನ್ನು ಅವಳಿಗೆ ಕೊಡುವಂತೆ ಅಪ್ಪಣೆಕೊಟ್ಟನು.
ಅವನು ಆಳುಗಳನ್ನು ಕಳುಹಿಸಿ ಸೆರೆಮನೆಯಲ್ಲಿದ್ದ ಯೋಹಾನನ ತಲೆಯನ್ನು ಕಡಿಸಿದನು.
ಇದಲ್ಲದೆ ಅವನ ತಲೆಯನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.
ಬಳಿಕ ಯೋಹಾನನ ಶಿಷ್ಯರು ಬಂದು ಅವನ ಶವವನ್ನು ತೆಗೆದುಕೊಂಡುಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ತಿಳಿಸಿದರು.
ಯೇಸು ಆ ವಿಷಯವನ್ನು ಕೇಳಿದಾಗ ದೋಣಿಯನ್ನು ಹತ್ತಿ ಅಲ್ಲಿಂದ ಏಕಾಂತ ಸ್ಥಳಕ್ಕೆ ಹೊರಟರು. ಜನರು ಇದನ್ನು ಕೇಳಿ ಪಟ್ಟಣಗಳಿಂದ ಕಾಲು ನಡಿಗೆಯಲ್ಲಿ ಯೇಸುವನ್ನು ಹಿಂಬಾಲಿಸಿದರು.
ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ಕಂಡು, ಅವರ ಮೇಲೆ ಕನಿಕರಪಟ್ಟು, ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದರು.
ಸಂಜೆಯಾದಾಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಸಮಯವು ದಾಟಿದೆ. ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು,” ಎಂದರು.
ಆದರೆ ಯೇಸುವು, “ಅವರು ಹೋಗಬೇಕಾಗಿಲ್ಲ. ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದು ಹೇಳಿದರು.
ಅವರು ಯೇಸುವಿಗೆ, “ನಮ್ಮ ಹತ್ತಿರ ಐದು ರೊಟ್ಟಿ ಎರಡು ಮೀನುಗಳು ಮಾತ್ರ ಇವೆ,” ಎಂದು ಉತ್ತರಕೊಟ್ಟರು.
ಯೇಸು, “ಅವುಗಳನ್ನು ತೆಗೆದುಕೊಂಡು ನನ್ನ ಬಳಿಗೆ ಬನ್ನಿರಿ,” ಎಂದರು.
ಜನಸಮೂಹವು ಹುಲ್ಲಿನ ಮೇಲೆ ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆಕೊಟ್ಟು, ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ಅವುಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನಸಮೂಹಕ್ಕೆ ಕೊಟ್ಟರು.
ಅವರೆಲ್ಲರೂ ತಿಂದು ತೃಪ್ತರಾದರು. ಶಿಷ್ಯರು ಉಳಿದ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿ ತುಂಬಿದವು.
ಊಟಮಾಡಿದವರಲ್ಲಿ ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿ ಇದ್ದರು.
ಇದಾದ ಕೂಡಲೇ ಯೇಸು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ತಮ್ಮ ಶಿಷ್ಯರು ದೋಣಿಯನ್ನು ಹತ್ತಿ ತಮಗಿಂತ ಮುಂದಾಗಿ ಆಚೆದಡಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು.
ಯೇಸು ಜನಸಮೂಹವನ್ನು ಕಳುಹಿಸಿದ ಮೇಲೆ, ಪ್ರಾರ್ಥನೆಮಾಡಲು ಏಕಾಂತವಾಗಿ ಬೆಟ್ಟಕ್ಕೆ ಹೋದರು. ಸಂಜೆಯಾದಾಗ ಯೇಸು ಒಬ್ಬರೇ ಅಲ್ಲಿ ಇದ್ದರು.
ಅಷ್ಟರಲ್ಲಿ ದೋಣಿಯು ತೀರದಿಂದ ಬಹುದೂರ ಹೋಗಿತ್ತು, ಎದುರುಗಾಳಿ ಬೀಸುತ್ತಿದ್ದದರಿಂದ ತೆರೆಗಳ ಬಡಿತಕ್ಕೆ ಸಿಕ್ಕಿ ಹೊಯ್ದಾಡುತ್ತಿತ್ತು.
ರಾತ್ರಿ ಮೂರು ಗಂಟೆಯಲ್ಲಿ ಯೇಸು ಸರೋವರದ ಮೇಲೆ, ನಡೆಯುತ್ತಾ ಶಿಷ್ಯರ ಬಳಿಗೆ ಬಂದರು.
ಯೇಸು ಸರೋವರದ ಮೇಲೆ ನಡೆಯುವುದನ್ನು ಶಿಷ್ಯರು ಕಂಡು ಕಳವಳಪಟ್ಟು, “ಅದು ಭೂತ,” ಎಂದು ಭೀತಿಯಿಂದ ಕೂಗಿಕೊಂಡರು.
ಯೇಸು ತಕ್ಷಣವೇ ಅವರಿಗೆ, “ಧೈರ್ಯವಾಗಿರಿ, ನಾನೇ, ಭಯಪಡಬೇಡಿರಿ,” ಎಂದರು.
ಆಗ ಪೇತ್ರನು ಯೇಸುವಿಗೆ, “ಸ್ವಾಮೀ, ನೀವೇ ಆಗಿದ್ದರೆ, ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರಲು ನನಗೆ ಅಪ್ಪಣೆಕೊಡಿರಿ,” ಎಂದನು.
ಅದಕ್ಕೆ ಯೇಸು, “ಬಾ,” ಎಂದರು.
ಆದರೆ ಬಲವಾದ ಗಾಳಿಯನ್ನು ಕಂಡು, ಅವನು ಭಯಪಟ್ಟು ಮುಳುಗುತ್ತಾ, “ಸ್ವಾಮಿ, ನನ್ನನ್ನು ಕಾಪಾಡಿರಿ!” ಎಂದು ಕೂಗಿ ಹೇಳಿದನು.
ತಕ್ಷಣವೇ ಯೇಸು ತಮ್ಮ ಕೈಯನ್ನು ಚಾಚಿ ಪೇತ್ರನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ, ನೀನು ಏಕೆ ಸಂದೇಹಪಟ್ಟೆ?” ಎಂದರು.
ಅವರು ದೋಣಿ ಹತ್ತಿದಾಗ, ಗಾಳಿ ನಿಂತುಹೋಯಿತು.
ದೋಣಿಯಲ್ಲಿದ್ದವರು ಯೇಸುವಿನ ಬಳಿಗೆ ಬಂದು ಅವರನ್ನು ಆರಾಧಿಸಿ, “ನಿಜವಾಗಿಯೂ ನೀವು ದೇವಪುತ್ರ,” ಎಂದು ಹೇಳಿದರು.
ಅವರು ಸರೋವರವನ್ನು ದಾಟಿ, ಗೆನೆಜರೇತ್ ಊರಿಗೆ ಬಂದರು.
ಆಗ ಅಲ್ಲಿದ್ದ ಜನರು ಯೇಸುವಿನ ಗುರುತು ಹಿಡಿದು, ಸುತ್ತುಮುತ್ತಲಿನ ಊರುಗಳಿಗೆಲ್ಲಾ ಹೇಳಿ ಕಳುಹಿಸಿ, ರೋಗಿಗಳನ್ನೆಲ್ಲಾ ಯೇಸುವಿನ ಬಳಿಗೆ ತಂದರು.
ಅವರು ಯೇಸುವಿನ ಉಡುಪಿನ ಅಂಚನ್ನಾದರೂ ಸ್ಪರ್ಶಿಸಬೇಕೆಂದು ಅವರನ್ನು ಬೇಡಿಕೊಂಡರು. ಯೇಸುವನ್ನು ಮುಟ್ಟಿದವರೆಲ್ಲರೂ ಸ್ವಸ್ಥರಾದರು.