“ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋದ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವುದು.
JA
Copywork
Kannada OKCV Matthew 25장
写経は速く終える入力練習ではなく、一節ずつみ言葉の文と流れを改めて受け止める時間です。入力内容はこのブラウザに一時保存され、ログインするとアカウントにも保存されます。
小見出し単位で進める · Matthew
ಅವರಲ್ಲಿ ಐದು ಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು.
ಬುದ್ಧಿಹೀನರು, ತಮ್ಮ ದೀಪಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.
ಬುದ್ಧಿವಂತೆಯರೋ, ತಮ್ಮ ದೀಪಗಳೊಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.
ಮದುಮಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸುತ್ತಾ ನಿದ್ರೆ ಹೋದರು.
“ಮಧ್ಯರಾತ್ರಿಯಲ್ಲಿ, ‘ನೋಡಿರಿ, ಮದುಮಗನು ಬರುತ್ತಿದ್ದಾನೆ, ಅವನನ್ನು ಎದುರುಗೊಳ್ಳುವುದಕ್ಕಾಗಿ ಹೊರಡಿರಿ,’ ಎಂಬ ಕೂಗಾಯಿತು.
“ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು.
ಬುದ್ಧಿಹೀನರು ಬುದ್ಧಿವಂತೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿರಿ, ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ,’ ಎಂದರು.
“ಆದರೆ ಬುದ್ಧಿವಂತೆಯರು ಉತ್ತರವಾಗಿ, ‘ಹಾಗಲ್ಲ, ಅದು ನಮಗೂ ಸಾಲದೆ ಹೋದೀತು. ಆದ್ದರಿಂದ ನೀವು ಮಾರುವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡುಕೊಳ್ಳಿರಿ,’ ಎಂದರು.
“ಅವರು ಕೊಂಡುಕೊಳ್ಳುವುದಕ್ಕೆ ಹೋದಾಗ, ಮದುಮಗನು ಬಂದನು. ಆಗ ಸಿದ್ಧವಾಗಿದ್ದವರು ಆತನೊಂದಿಗೆ ಮದುವೆಯ ಔತಣಕ್ಕೆ ಒಳಗೆ ಹೋದರು. ತರುವಾಯ ಬಾಗಿಲು ಮುಚ್ಚಲಾಯಿತು.
“ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದರು.
“ಆದರೆ ಆತನು ಉತ್ತರವಾಗಿ, ‘ನಾನು ನಿಮ್ಮನ್ನು ಅರಿಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ,’ ಎಂದನು.
“ಆದ್ದರಿಂದ ಎಚ್ಚರವಾಗಿರಿ, ಏಕೆಂದರೆ ಮನುಷ್ಯಪುತ್ರನಾದ ನನ್ನ ಬರುವ ದಿನವನ್ನಾಗಲಿ ಗಳಿಗೆಯನ್ನಾಗಲಿ ನೀವು ಅರಿಯದವರಾಗಿದ್ದೀರಿ, ಎಂದರು.
“ಪರಲೋಕ ರಾಜ್ಯವು ದೂರದೇಶಕ್ಕೆ ಪ್ರಯಾಣ ಮಾಡುವ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
ಅವನು ಒಬ್ಬನಿಗೆ ಐದು ಚಿನ್ನದ ನಾಣ್ಯಗಳನ್ನು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು; ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಕೂಡಲೇ ಪ್ರಯಾಣಮಾಡಿದನು.
ಐದು ಚಿನ್ನದ ನಾಣ್ಯಗಳನ್ನು ಹೊಂದಿದವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ಚಿನ್ನದ ನಾಣ್ಯಗಳನ್ನು ಸಂಪಾದಿಸಿದನು.
ಅದೇ ಪ್ರಕಾರ, ಎರಡು ಚಿನ್ನದ ನಾಣ್ಯಗಳನ್ನು ಹೊಂದಿದವನು ಸಹ ಇನ್ನು ಬೇರೆ ಎರಡು ಚಿನ್ನದ ನಾಣ್ಯಗಳನ್ನು ಸಂಪಾದಿಸಿದನು.
ಆದರೆ ಒಂದು ಚಿನ್ನದ ನಾಣ್ಯವನ್ನು ಹೊಂದಿದವನು ಹೋಗಿ ಭೂಮಿಯನ್ನು ಅಗೆದು, ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
“ಬಹುಕಾಲವಾದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ಕೇಳಿದನು.
ಆಗ ಐದು ಚಿನ್ನದ ನಾಣ್ಯಗಳನ್ನು ಹೊಂದಿದ್ದವನು ಬಂದು ಬೇರೆ ಐದು ಚಿನ್ನದ ನಾಣ್ಯಗಳನ್ನು ತಂದು, ‘ಒಡೆಯನೇ, ನೀನು ನನಗೆ ಐದು ಚಿನ್ನದ ನಾಣ್ಯಗಳನ್ನು ಒಪ್ಪಿಸಿದ್ದೆ. ನೋಡು, ಅವುಗಳಲ್ಲದೆ ಇನ್ನೂ ಬೇರೆ ಐದು ಚಿನ್ನದ ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,’ ಎಂದನು.
“ಆಗ ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.
“ಎರಡು ಚಿನ್ನದ ನಾಣ್ಯಗಳನ್ನು ಹೊಂದಿದ್ದವನು ಸಹ ಬಂದು, ‘ಒಡೆಯನೇ, ನೀನು ನನಗೆ ಎರಡು ಚಿನ್ನದ ನಾಣ್ಯಗಳನ್ನು ಒಪ್ಪಿಸಿದ್ದೆ. ನೋಡು, ಇನ್ನೂ ಎರಡು ಚಿನ್ನದ ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,’ ಎಂದನು.
“ಆಗ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ, ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.
“ಆಗ ಒಂದು ಚಿನ್ನದ ನಾಣ್ಯ ಹೊಂದಿದ್ದವನು ಬಂದು, ‘ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು.
ಆದ್ದರಿಂದ ನಾನು ಭಯಪಟ್ಟು ಹೋಗಿ ನಿನ್ನ ಚಿನ್ನದ ನಾಣ್ಯವನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ನೋಡು, ನೀನು ಕೊಟ್ಟಿದ್ದನ್ನು ನಿನಗೇ ಕೊಡುತ್ತೇನೆ,’ ಎಂದನು.
“ಅದಕ್ಕೆ ಅವನ ಯಜಮಾನನು ಉತ್ತರವಾಗಿ, ‘ಮೈಗಳ್ಳನಾದ ದುಷ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ.
ಹಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ ಕೊಡಬೇಕಾಗಿತ್ತು; ನಾನು ಬಂದಾಗ ಹಣವನ್ನು ಬಡ್ಡಿ ಸಮೇತವಾಗಿ ಪಡೆದುಕೊಳ್ಳುತ್ತಿದ್ದೆನು,’ ಎಂದು ಹೇಳಿ,
“ತನ್ನ ಸೇವಕರಿಗೆ, ‘ಅವನಿಂದ ಆ ಚಿನ್ನದ ನಾಣ್ಯವನ್ನು ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳು ಇದ್ದವನಿಗೆ ಕೊಡಿರಿ.
ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು, ಅವರಿಗೆ ಹೆಚ್ಚು ಸಮೃದ್ಧಿಯಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು.
ನಿಷ್ಪ್ರಯೋಜಕನಾದ ಆ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ. ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು,’ ಎಂದನು.
“ಮನುಷ್ಯಪುತ್ರನಾದ ನಾನು ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ, ನನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆನು.
ನನ್ನ ಮುಂದೆ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಲಾಗುವುದು. ಆಗ ಕುರುಬನು ತನ್ನ ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ನಾನು ಅವರನ್ನು ಪ್ರತ್ಯೇಕಿಸುವೆನು.
ನಾನು ಕುರಿಗಳನ್ನು ನನ್ನ ಬಲಗಡೆಯಲ್ಲಿಯೂ ಆಡುಗಳನ್ನು ಎಡಗಡೆಯಲ್ಲಿಯೂ ನಿಲ್ಲಿಸುವೆನು.
“ಆಗ ನಾನು ನನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ಬನ್ನಿರಿ, ಭೂಲೋಕಕ್ಕೆ ಅಸ್ತಿವಾರ ಹಾಕಿದ ದಿನದಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಆಸ್ತಿಯನ್ನಾಗಿ ಹೊಂದಿರಿ.
ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಟ್ಟಿರಿ.
ನಾನು ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿದಿರಿ. ನಾನು ಅಸ್ವಸ್ಥನಾಗಿದ್ದೆನು, ನೀವು ನನ್ನನ್ನು ಉಪಚರಿಸಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ,’ ಎಂದು ಹೇಳುವೆನು.
“ಆಗ ಆ ನೀತಿವಂತರು ಉತ್ತರವಾಗಿ ನನಗೆ, ‘ಕರ್ತನೇ, ನೀನು ಯಾವಾಗ ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವುದಕ್ಕೆ ಕೊಟ್ಟೆವು?
ನೀನು ಪರದೇಶಿಯಾಗಿರುವುದನ್ನು ನಾವು ಯಾವಾಗ ಕಂಡು ನಿನಗೆ ಆಶ್ರಯ ಕೊಟ್ಟೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು?
ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನ ಬಳಿಗೆ ಬಂದೆವು?’ ಎಂದು ಕೇಳುವರು.
“ಅದಕ್ಕೆ ನಾನು ಉತ್ತರವಾಗಿ ಅವರಿಗೆ, ‘ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ನೀವು ಈ ನನ್ನ ಸಹೋದರರಲ್ಲಿ ಅತ್ಯಲ್ಪನಾದವನೊಬ್ಬನಿಗೆ, ಮಾಡಿದ್ದು ನನಗೇ ಮಾಡಿದಂತಾಯಿತು,’ ಎನ್ನುವೆನು.
“ನಾನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.
ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ.
ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಳ್ಳಲಿಲ್ಲ. ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ. ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂದರ್ಶಿಸಲಿಲ್ಲ,’ ಎಂದು ಹೇಳುವೆನು.
“ಆಗ ಅವರು ಸಹ ಉತ್ತರವಾಗಿ ನನಗೆ, ‘ಕರ್ತನೇ, ನೀನು ಹಸಿದಿದ್ದನ್ನೂ ಬಾಯಾರಿದ್ದನ್ನೂ ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ಯಾವಾಗ ನೋಡಿ ನಿನಗೆ ಉಪಚಾರಮಾಡಲಿಲ್ಲ?’ ಎಂದು ಕೇಳುವರು.
“ಆಗ ನಾನು ಅವರಿಗೆ ಉತ್ತರವಾಗಿ, ‘ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ನೀವು ಇವರಲ್ಲಿ ಅತ್ಯಲ್ಪನಾದ ಒಬ್ಬನಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡಲಿಲ್ಲ,’ ಎಂದು ಹೇಳುವೆನು.
“ಹೀಗೆ ಇವರು ನಿತ್ಯವಾದ ಶಿಕ್ಷೆಗೆ ಒಳಗಾಗುವರು. ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು,” ಎಂದು ಹೇಳುವೆನು.