ಯೇಸು ಜನಸಮೂಹಕ್ಕೂ ತಮ್ಮ ಶಿಷ್ಯರಿಗೂ
JA
Copywork
Kannada OKCV Matthew 23장
写経は速く終える入力練習ではなく、一節ずつみ言葉の文と流れを改めて受け止める時間です。入力内容はこのブラウザに一時保存され、ログインするとアカウントにも保存されます。
小見出し単位で進める · Matthew
ಹೇಳಿದ್ದೇನೆಂದರೆ: “ನಿಯಮ ಬೋಧಕರೂ ಫರಿಸಾಯರೂ ಮೋಶೆಯ ಆಸನದಲ್ಲಿ ಕುಳಿತಿದ್ದಾರೆ.
ಆದ್ದರಿಂದ ಅವರು ನಿಮಗೆ ಹೇಳುವುದನ್ನೆಲ್ಲಾ ಅನುಸರಿಸಿ ನಡೆಯಿರಿ. ಆದರೆ ಅವರ ನಡತೆಗಳ ಪ್ರಕಾರ ನೀವು ನಡೆಯಬೇಡಿರಿ. ಏಕೆಂದರೆ ಅವರು ಹೇಳಿದಂತೆ ಮಾಡುವುದಿಲ್ಲ.
ಹೊರುವುದಕ್ಕೆ ಭಾರವಾದ ಮತ್ತು ಹೊರಲಾಗದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಅವರು ಹೊರಿಸುತ್ತಾರೆ. ತಾವಾದರೋ ತಮ್ಮ ಬೆರಳಿನಿಂದಲೂ ಅವುಗಳನ್ನು ಮುಟ್ಟುವುದಿಲ್ಲ.
“ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡುತ್ತಾರೆ. ಅವರು ತಮ್ಮ ಬಾಹುಗಳ ಮೇಲೆ ದೇವರ ವಾಕ್ಯವುಳ್ಳ ಡಬ್ಬಿಗಳನ್ನು ಮತ್ತು ಹಣೆಯ ಮೇಲೆ ಅಗಲ ಪಟ್ಟಿಗಳನ್ನು ಮಾಡಿ ಉಡುಪುಗಳ ಅಂಚುಗಳನ್ನು ಉದ್ದಮಾಡುತ್ತಾರೆ.
ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ
ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಮತ್ತು ಜನರಿಂದ, ‘ಬೋಧಕರೇ,’ ಎಂದು ಕರೆಯಿಸಿಕೊಳ್ಳಲು ಅವರು ಇಚ್ಛಿಸುತ್ತಾರೆ.
“ಆದರೆ ನೀವು, ‘ಬೋಧಕರು,’ ಎಂದು ಕರೆಯಿಸಿಕೊಳ್ಳಬೇಡಿರಿ. ಏಕೆಂದರೆ ನಿಮಗಿರುವ ಬೋಧಕರು ಒಬ್ಬರೇ ನೀವೆಲ್ಲರೂ ಸಹೋದರರು.
ಭೂಮಿಯಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿರಿ, ಪರಲೋಕದಲ್ಲಿ ಇರುವವರೇ ನಿಮ್ಮ ತಂದೆ.
ಗುರುವೆಂದೂ ಕರೆಯಿಸಿಕೊಳ್ಳಬೇಡಿರಿ. ಏಕೆಂದರೆ ಕ್ರಿಸ್ತನೊಬ್ಬನೇ ನಿಮ್ಮ ಗುರುವು.
ಆದರೆ ನಿಮ್ಮಲ್ಲಿ ಅತಿ ದೊಡ್ಡವನಾಗಿರುವವನು ನಿಮ್ಮ ಸೇವಕನಾಗಿರಬೇಕು.
ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವವರು ತಗ್ಗಿನ ಅನುಭವ ಹೊಂದುವರು. ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಉನ್ನತ ಅನುಭವ ಹೊಂದುವರು.
“ಆದರೆ ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಮನುಷ್ಯರ ಮುಂದೆ ಪರಲೋಕ ರಾಜ್ಯವನ್ನು ಮುಚ್ಚುತ್ತೀರಿ. ನೀವೂ ಪ್ರವೇಶಿಸುವುದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಗೆ ಬಿಡುವುದಿಲ್ಲ.
“ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ವಿಧವೆಯರ ಮನೆಗಳನ್ನು ನುಂಗುತ್ತೀರಿ. ನಟನೆಗಾಗಿ ಉದ್ದವಾದ ಪ್ರಾರ್ಥನೆಯನ್ನು ಮಾಡುತ್ತೀರಿ. ಆದ್ದರಿಂದ ನೀವು ಹೆಚ್ಚಾದ ದಂಡನೆಯನ್ನು ಹೊಂದುವಿರಿ.
“ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ ನಿಮಗೆ ಕಷ್ಟ! ಏಕೆಂದರೆ ಒಬ್ಬನನ್ನು ಮತಾಂತರ ಮಾಡುವುದಕ್ಕೆ ನೀವು ಸಮುದ್ರವನ್ನೂ ಭೂಮಿಯನ್ನೂ ಸುತ್ತುತ್ತೀರಿ. ಮತಾಂತರ ಮಾಡಿದ ಮೇಲೆ ಅವನನ್ನು ನಿಮಗಿಂತಲೂ ಎರಡರಷ್ಟು ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ.
“ಕುರುಡರಾದ ಮಾರ್ಗದರ್ಶಕರೇ! ನಿಮಗೆ ಕಷ್ಟ, ‘ಯಾವನಾದರೂ ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಎನ್ನುತ್ತೀರಿ. ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಅದನ್ನು ಕೊಟ್ಟುಬಿಡಬೇಕು,’ ಎನ್ನುತ್ತೀರಿ.
ಮೂರ್ಖರೇ, ಕುರುಡರೇ, ಯಾವುದು ದೊಡ್ಡದು? ಚಿನ್ನವೋ ಚಿನ್ನವನ್ನು ಪಾವನ ಮಾಡುವ ದೇವಾಲಯವೋ?
‘ಯಾರಾದರೂ ಬಲಿಪೀಠದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆ ಮೇಲೆ ಆಣೆಯಿಟ್ಟರೆ ಅವನು ಅದನ್ನು ಕೊಟ್ಟುಬಿಡಬೇಕು,’ ಎನ್ನುತ್ತೀರಿ.
ಕುರುಡರೇ, ಯಾವುದು ದೊಡ್ಡದು? ಕಾಣಿಕೆಯೋ ಕಾಣಿಕೆಯನ್ನು ಪಾವನ ಮಾಡುವ ಬಲಿಪೀಠವೋ?
ಆದ್ದರಿಂದ, ಬಲಿಪೀಠದ ಮೇಲೆ ಆಣೆಯಿಡುವವನು ಅದರ ಮೇಲೆಯೂ ಅದರಲ್ಲಿರುವ ಎಲ್ಲದರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆಯೂ ಅದರಲ್ಲಿ ವಾಸಿಸುವ ದೇವರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
ಪರಲೋಕದ ಮೇಲೆ ಆಣೆಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಆಸೀನರಾದ ದೇವರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
“ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಪುದೀನ, ಸದಾಪು, ಜೀರಿಗೆಗಳ ದಶಮಭಾಗವನ್ನು ಸಲ್ಲಿಸುತ್ತೀರಿ. ಆದರೆ ನಿಯಮದ ನ್ಯಾಯನೀತಿ, ಕರುಣೆ, ನಂಬಿಕೆ ಎಂಬ ಈ ಪ್ರಮುಖವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗಳೊಂದಿಗೆ ಆ ಬೇರೆಯವುಗಳನ್ನು ಬಿಟ್ಟುಬಿಡದೆ ಮಾಡಬೇಕಾಗಿತ್ತು.
ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೆ ಸೋಸುತ್ತೀರಿ ಒಂಟೆ ನುಂಗುತ್ತೀರಿ.
“ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ.
ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.
“ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಸುಣ್ಣ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ. ಆದರೆ ಒಳಗೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರುತ್ತವೆ.
ಅದರಂತೆಯೇ, ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ. ಆದರೆ ನೀವು ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.
“ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ ನೀತಿವಂತರ ಸಮಾಧಿಗಳನ್ನು ಅಲಂಕರಿಸುತ್ತೀರಿ.
ಆದರೆ, ‘ನಾವು ನಮ್ಮ ಪಿತೃಗಳ ದಿನಗಳಲ್ಲಿ ಇರುತ್ತಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಪಿತೃಗಳೊಂದಿಗೆ ಪಾಲುಗಾರರಾಗುತ್ತಿರಲಿಲ್ಲ’ ಎಂದು ಹೇಳುತ್ತೀರಿ.
ಆದ್ದರಿಂದ ನೀವು ಆ ಪ್ರವಾದಿಗಳನ್ನು ಕೊಂದವರ ಮಕ್ಕಳೇ ಎಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ.
ಹಾಗಾದರೆ ನಿಮ್ಮ ಪಿತೃಗಳ ಅಪರಾಧದ ಅಳತೆಯನ್ನು ನೀವೇ ಪೂರ್ಣಗೊಳಿಸಿರಿ.
“ಹಾವುಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆಯಿಂದ ಹೇಗೆ ತಪ್ಪಿಸಿಕೊಂಡೀರಿ?
ಆದ್ದರಿಂದ ನೋಡಿರಿ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ನಿಯಮ ಬೋಧಕರನ್ನೂ ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ ಏರಿಸುವಿರಿ. ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸುವಿರಿ.
ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲುಗೊಂಡು ದೇವಾಲಯಕ್ಕೂ ಬಲಿಪೀಠಕ್ಕೂ ನಡುವೆ ನೀವು ಕೊಂದುಹಾಕಿದ ಬರಕೀಯನ ಮಗ ಜಕರೀಯನ ರಕ್ತದವರೆಗೂ ಭೂಮಿಯಲ್ಲಿ ಸುರಿಸಲಾದ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವುದು.
ನಿಮಗೆ ನಿಜವಾಗಿ ಹೇಳುತ್ತೇನೆ: ಇವೆಲ್ಲವೂ ಈ ಸಂತತಿಯವರ ಮೇಲೆ ಬರುವವು.
“ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.
ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು.
ಏಕೆಂದರೆ, ‘ಕರ್ತನ ಹೆಸರಿನಲ್ಲಿ ಬರುವವರು ಧನ್ಯರು’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ” ಎಂದರು.